Kannada News | Recipe tips in Kannada
ಮಲೆನಾಡಿನ ಶಿವಮೊಗ್ಗ, ಸಾಗರ ಮುಂತಾದ ಕಡೆ ಅನೇಕ ರೀತಿಯ ಗಿಡಗಳ ಸಿಪ್ಪೆ, ಸೊಪ್ಪು, ಬೀಜ, ಕಾಯಿ, ಬೇರು ತೊಗಟೆ ಮುಂತಾದವುಗಳನ್ನು ಉಪಯೋಗಿಸಿ ಸುಮಾರು 100ಕ್ಕೂ ಹೆಚ್ಚು ರೀತಿಯ ತಂಬುಳಿಗಳನ್ನು ತಯಾರಿಸುತ್ತಾರೆ. ಅದರಲ್ಲಿ ಮೆಂತ್ಯೆ ಮೆಣಸಿನಕಾಯಿ ತಂಬುಳಿ ಊಟಕ್ಕೂ ರುಚಿ ಉದರಕ್ಕೂ ಹಿತ. ಅದರಲ್ಲೂ ಈ ತಂಬುಳಿ ಅಜೀರ್ಣ, ಹೊಟ್ಟೆ ನೋವು ನಿವಾರಿಸಿ ಹಸಿವನ್ನು ವೃದ್ಧಿಸುತ್ತದೆ.
ಬೇಕಾಗುವ ಸಾಮಗ್ರಿಗಳು
- ಎರಡು ಲೋಟ ಮಜ್ಜಿಗೆ,
- ಎರಡು ಕೆಂಪುಮೆಣಸಿನ ಕಾಯಿ,
- ಒಂದೂವರೆ ಟೀ ಚಮಚ ಮೆಂತ್ಯೆ,
- ಕಾಲು ಟೀ ಚಮಚ ಜೀರಿಗೆ,
- ಕಾಲು ಟೀ ಚಮಚ ಸಾಸಿವೆ,
- ಒಂದು ಟೀ ಚಮಚ ಕಾಯಿತುರಿ,
- ಒಂದೂವರೆ ಟೀ ಚಮಚ ತುಪ್ಪ,
- ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
- ಒಂದು ಟೀ ಚಮಚ ತುಪ್ಪವನ್ನು ಬಾಣಲೆಯಲ್ಲಿ ಬಿಸಿಮಾಡಿ ಮೆಂತ್ಯೆ ಹಾಕಿ ಸಿಡಿಸಿ ನಂತರ ಕತ್ತರಿಸಿದ ಕೆಂಪು ಮೆಣಸಿನಕಾಯಿ, ಜೀರಿಗೆ, ಸಾಸಿವೆ ಸೇರಿಸಿ ಹುರಿಯಿರಿ. ಸಾಸಿವೆ ಸಿಡಿದಾಗ ಕೆಳಗಿರಿಸಿ.
- ಈಗ ಕಾಯಿತುರಿ, ಉಪ್ಪು ಸೇರಿಸಿ ಮಜ್ಜಿಗೆಯೊಂದಿಗೆ ರುಬ್ಬಿ.
- ನಂತರ ಉಳಿದ ಮಜ್ಜಿಗೆ ಸೇರಿಸಿರಿ. ತುಪ್ಪದಲ್ಲಿ ಒಗ್ಗರಣೆ ಕೊಡಿ.